ತಿನ್ನೋ ಅನ್ನಕ್ಕೆ ಬೆಂಕಿ ಇಟ್ಟ ದುರುಳರು – ಬಡ ವ್ಯಾಪಾರಿಯ ಜೀವನೋಪಾಯಕ್ಕೆ ದಾಳಿ
ಬೆಂಗಳೂರು:
ನಗರದ ಉಲ್ಲಾಳುವಿನ ಮರಿಯಪ್ಪನ ಪಾಳ್ಯದಲ್ಲಿ ದುರುಳರಿಂದ ನಡೆದ ಹೃದಯವಿದ್ರಾವಕ ಘಟನೆ ಜನರಲ್ಲಿ ಆಕ್ರೋಶ ಹುಟ್ಟಿಸಿದೆ. ಜ್ಞಾನಭಾರತಿ ಎಕ್ಸ್ಟೆನ್ಷನ್ ಬಳಿ ತರಕಾರಿ-ಹಣ್ಣು ಮಾರುತ್ತಿದ್ದ ಬಡ ವ್ಯಾಪಾರಿಯ ತಳ್ಳುಗಾಡಿಗೆ ತಡರಾತ್ರಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಸ್ಥಳೀಯರ ಪ್ರಕಾರ, ಕೆಲವು ದಿನಗಳಿಂದ ತಳ್ಳುಗಾಡಿ ಮೂಲಕ ವ್ಯಾಪಾರ ನಡೆಸುತ್ತಿದ್ದ ಬಡ ವ್ಯಾಪಾರಿಯು ಹೆಚ್ಚು ಗ್ರಾಹಕರನ್ನು ಸೆಳೆಯುತ್ತ ಉತ್ತಮ ವ್ಯಾಪಾರ ಮಾಡುತ್ತಿದ್ದ. ಇದನ್ನು ಸಹಿಸದ ದುಷ್ಕರ್ಮಿಗಳೇ ಈ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಅರ್ಧರಾತ್ರಿ ಬೈಕ್ನಲ್ಲಿ ಬಂದ ಮೂವರು ಶಂಕಿತರು ಗಾಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದರೆಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸುಮಾರು ₹25 ಸಾವಿರ ಮೌಲ್ಯದ ಹಣ್ಣು-ತರಕಾರಿ ಸಂಪೂರ್ಣವಾಗಿ ಭಸ್ಮವಾಗಿದೆ.
ಈ ಘಟನೆ ಬಡ ವ್ಯಾಪಾರಿಯ ಜೀವನೋಪಾಯದ ಮೇಲೆ ನೇರ ದಾಳಿ ಆಗಿದ್ದು, ಸ್ಥಳೀಯರು ಇದನ್ನು ತೀವ್ರ ಖಂಡಿಸಿದ್ದಾರೆ. “ತಿನ್ನೋ ಅನ್ನಕ್ಕೆ ಬೆಂಕಿ ಹಚ್ಚುವಷ್ಟು ನೀಚತನ ಇನ್ನು ಏನಿರಬಹುದು?” ಎಂದು ಜನರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕುರಿತು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಜೋರಾಗಿದೆ.
ವಿಡಿಯೋ ಇಲ್ಲಿದೆ ನೋಡಿ


