"ನಾವು ಮೊದಲು ಮನುಷ್ಯರು, ನಂತರ ಭಾರತೀಯರು, ಆಮೇಲೆ ಹಿಂದೂಗಳು, ಮುಸ್ಲೀಮರು" – ಸಿ.ಎಂ. ಸಿದ್ದರಾಮಯ್ಯ
ಸರ್ವರನ್ನೂ ಸಮಾನವಾಗಿ ಕಾಣುವುದು ನಮ್ಮ ಸರ್ಕಾರದ ನಿಲುವು – ಉಳ್ಳಾಲ ದರ್ಗಾ ಮಹೋತ್ಸವದಲ್ಲಿ ಸಿ.ಎಂ ಮಾತು
ಮಂಗಳೂರು, ಮೇ 15:
"ನಾವು ಮೊದಲಿಗೆ ಮನುಷ್ಯರು, ಬಳಿಕ ಭಾರತೀಯರು, ನಂತರ ಹಿಂದೂಗಳು, ಮುಸ್ಲೀಮರು ಹಾಗೂ ಇತರೆ ಧರ್ಮೀಯರು" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಲ್ಲೇಖಿಸಿದರು. ಅವರು ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುತ್ತಿದ್ದರು.
"ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಎಲ್ಲರನ್ನು ಸಮಾನವಾಗಿ ನೋಡುತ್ತದೆ. ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ನಾವು ಈ ಮೌಲ್ಯಗಳನ್ನೇ ಅನುಸರಿಸುತ್ತಿದ್ದೇವೆ," ಎಂದು ಸಿ.ಎಂ ಹೇಳಿದರು.
ಅವರು ಮುಂದೆ ಹೇಳುತ್ತಾ, "ಭಾರತದ ಭೂಮಿಯಲ್ಲಿ ಅನೇಕ ಸೂಫಿಗಳು, ಸಾದುಗಳು, ಸಂತರು ಹಾಗೂ ಸಾಮಾಜಿಕ ಹರಿಕಾರರು ಜನರೆದುರು ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಬೋಧಿಸಿದವರು. ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ರೂಪಿಸಬೇಕಾಗಿದೆ" ಎಂದರು.
ಉಳ್ಳಾಲದ ದರ್ಗಾದ ಕುರಿತು ಮಾತನಾಡಿದ ಅವರು, "ಈ ದರ್ಗಾಕ್ಕೆ ಜಾತಿ, ಧರ್ಮದ ಯಾವೇನೂ ಅಡ್ಡಿಯಿಲ್ಲ. ಇದು ಎಲ್ಲಾ ಜಾತಿಯ, ಎಲ್ಲಾ ಧರ್ಮದ ಬಡವರಿಗೆ ಆಶ್ರಯ ಕೇಂದ್ರವಾಗಿದೆ," ಎಂದು ಹೇಳಿದರು.
"ನಮ್ಮ ಸರ್ಕಾರದ ಯೋಜನೆಗಳು ಎಲ್ಲ ಜಾತಿ ಮತ್ತು ಎಲ್ಲಾ ಧರ್ಮದವರಿಗೆ ಸಮಾನವಾಗಿ ಲಭಿಸುವಂತೆ ರೂಪಿಸಲಾಗಿದೆ. ಯಾವುದೇ ಭೇದಭಾವವಿಲ್ಲದೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ," ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ವರದಿ: ಡಿ.ಪಿ. ಅರವಿಂದ್ – ಎಫ್7 ನ್ಯೂಸ್


