ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಸಂಸದ ಮನವಿ: ಕರವೇ ಸ್ವಾಭಿಮಾನಿ ಬಣದಿಂದ ತೀವ್ರ ಖಂಡನೆ

ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಸಂಸದ ಮನವಿ: ಕರವೇ ಸ್ವಾಭಿಮಾನಿ ಬಣದಿಂದ ತೀವ್ರ ಖಂಡನೆ


ಶಿವಮೊಗ್ಗ/ಬೆಳಗಾವಿ:
ನವೆಂಬರ್ 1ರಂದು ಬೆಳಗಾವಿಯಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳು ಸಂಪೂರ್ಣ ಶಾಂತಿಯುತವಾಗಿ ಮತ್ತು ಯಶಸ್ವಿಯಾಗಿ ನೆರವೇರಿದ್ದರೂ, ಮಹಾರಾಷ್ಟ್ರದ ಸಂಸದ ಧೈರ್ಯಶೀಲ್ ಮಾನೆ ಅವರು ಕರ್ನಾಟಕದ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೊಹಮ್ಮದ್ ರೋಷನ್ ವಿರುದ್ಧ ಹಕ್ಕುಚ್ಯುತಿ ಪ್ರಕರಣ ದಾಖಲಿಸುವಂತೆ ಲೋಕಸಭಾ ಸ್ಪೀಕರ್ ಅವರಿಗೆ ಮನವಿ ಸಲ್ಲಿಸಿರುವುದು ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮತ್ತೊಂದು ಸಂಘರ್ಷಕ್ಕೆ ಕಾರಣವಾಗುವ ಆತಂಕವನ್ನು ಹುಟ್ಟಿಸಿದೆ.

ರಾಜ್ಯೋತ್ಸವದ ದಿನ ಯಾವುದೇ ಅಶಾಂತಿ ಉಂಟಾಗದಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಕಠಿಣ ಆಡಳಿತಾತ್ಮಕ ಕ್ರಮಗಳನ್ನು ಕೈಗೊಂಡಿದ್ದು, ಕರ್ನಾಟಕ ವಿರೋಧಿ ಪ್ರತಿಭಟನೆಗಳನ್ನು ಪರಿಣಾಮಕಾರಿಯಾಗಿ ತಡೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ದಿಟ್ಟ ಹಾಗೂ ಕಟ್ಟುನಿಟ್ಟಿನ ಕ್ರಮಗಳ ಫಲವಾಗಿ ರಾಜ್ಯೋತ್ಸವ ಕಾರ್ಯಕ್ರಮಗಳು ಯಾವುದೇ ಅಡಚಣೆ ಇಲ್ಲದೆ ಅದ್ಧೂರಿಯಾಗಿ ನೆರವೇರಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಯನ್ನೂ ಗಳಿಸಿತ್ತು.

ಈ ನಡುವೆ, ನವದೆಹಲಿಯಲ್ಲಿ ಲೋಕಸಭಾ ಸ್ಪೀಕರ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಸಂಸದ ಧೈರ್ಯಶೀಲ್ ಮಾನೆ, ನವೆಂಬರ್ 1ರಂದು ಕರ್ನಾಟಕ ಗಡಿಯಲ್ಲಿ ತನ್ನನ್ನು ಅಕ್ರಮವಾಗಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ರೋಷನ್ ಅವರು “ಅಕ್ರಮ ನೋಟಿಸ್” ಹೊರಡಿಸಿದ್ದು, ಅದರ ಆಧಾರದಲ್ಲಿ ಪೊಲೀಸರು ತನ್ನನ್ನು ಕರ್ನಾಟಕ ಪ್ರವೇಶಿಸುವುದನ್ನು ತಡೆದಿದ್ದಾರೆ ಎಂದು ಅವರು ದೂರಿದ್ದಾರೆ. ತಾನು ಜನಪ್ರತಿನಿಧಿಯಾಗಿರುವ ಹಿನ್ನಲೆಯಲ್ಲಿ ಇದು ತನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆ ಹಾಗೂ ಗಂಭೀರ ಅನ್ಯಾಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ, ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಹಾಗೂ ಬೆಳಗಾವಿಯ ಕೆಲವು ಮರಾಠಿ ಭಾಷಿಕರು ನವೆಂಬರ್ 1ರಂದು “ಕಪ್ಪು ದಿನ”ವಾಗಿ ಆಚರಿಸುತ್ತಾರೆ ಎಂದು ಧೈರ್ಯಶೀಲ್ ಮಾನೆ ಹೇಳಿಕೆ ನೀಡಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ದಿಟ್ಟ ನಿರ್ಧಾರ ಕೈಗೊಂಡು ಕನ್ನಡ ರಾಜ್ಯೋತ್ಸವವನ್ನು ಯಶಸ್ವಿಯಾಗಿ ಆಚರಿಸುವ ಮೂಲಕ ಕನ್ನಡಿಗರ ಆತ್ಮಗೌರವವನ್ನು ಎತ್ತಿ ಹಿಡಿದಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಪ್ರಶಂಸಿಸಿದೆ. ಅವರ ಕ್ರಮವು ಕನ್ನಡ ವಿರೋಧಿ ಶಕ್ತಿಗಳಿಗೆ ಪ್ರಖರ ಸಂದೇಶ ನೀಡಿದೆ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.

ಈ ಸಂಬಂಧ ಕರವೇ ಸ್ವಾಭಿಮಾನಿ ಬಣವು ರಾಜ್ಯದ ಎಲ್ಲಾ ಸಂಸದರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಪರವಾಗಿ ಲೋಕಸಭೆಯಲ್ಲಿ ಧ್ವನಿ ಎತ್ತಬೇಕೆಂದು ಆಗ್ರಹಿಸಿದೆ.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್.ಎಸ್., ಜಿಲ್ಲಾ ಉಪಾಧ್ಯಕ್ಷರಾದ ಮುಜಬುಲ್ಲ ಹಾಗೂ ವಿಜಯ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷರಾದ ಕವಿತಾ ಸಿ., ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಾಧಿಕ್, ಜಿಲ್ಲಾ ಖಜಾಂಚಿ ಗಣೇಶ್, ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಾ ಮಾಲತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಆರ್ಥಿಕ ತಿವಾರಿ ಹಾಗೂ ಜ್ಯೋತಿ, ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿಯಾದ ನಾಗರಾಜ್, ಕರವೇ ಮುಖಂಡರಾದ ಆನ್ಸರ್ ಹಾಗೂ ಅಜ್ಗರ್ ಸೇರಿದಂತೆ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.

ವರದಿ: ಡಿ.ಪಿ ಅರವಿಂದ್‌ ಎಫ್7ನ್ಯೂಸ್‌ ಶಿವಮೊಗ್ಗ




Post a Comment

Previous Post Next Post